ತನ್ನ ಊರು ಮಂಜೇಶ್ವರದಲ್ಲಿ ದುರಸ್ತಿಯಾಗದ ರಸ್ತೆಯನ್ನು ಸರಿ ಮಾಡಿಕೊಡಿ ಎಂದು ಮಂಗಳೂರು ಕಾಲೇಜು ವಿದ್ಯಾರ್ಥಿಯೋರ್ವ ಬರೆದ ಪತ್ರಕ್ಕೆ ಸ್ಪಂದಿಸಿ ಪ್ರಧಾನಮಂತ್ರಿ ಕಚೇರಿಯಿಂದ ರಸ್ತೆ ಸಮಸ್ಯೆಯನ್ನು ತುರ್ತು ಬಗೆಹರಿಸುವಂತೆ ಕೇರಳ ಸರ್ಕಾರಕ್ಕೆ ಆದೇಶ ಬಂದಿದೆ.
ನಗರದ ಶಾರದಾ ವಿದ್ಯಾಲಯದ ಪ್ರಥಮ ಪದವಿ ತರಗತಿಯಲ್ಲಿ ಓದುತ್ತಿರುವ ಮಂಜೇಶ್ವರದ ಕೋಡಿಬೈಲ್ ನಿವಾಸಿ ಅಶ್ವಲ್ ಶೆಟ್ಟಿ, ಡಾಂಬರು ಕಾಣದ ತನ್ನೂರಿನ ರಸ್ತೆಯಲ್ಲಿ ಸಂಭವಿಸುತ್ತಿರುವ ಅವಘಡದ ಬಗ್ಗೆ ಪತ್ರದಲ್ಲಿ ವಿವರಿಸಿದ್ದ.
ಜನಸಾಮಾನ್ಯರ ಸಮಸ್ಯೆಗಳಿಗೆ ಪ್ರಧಾನಿ ಸ್ಪಂದಿಸುತ್ತಾರೆಂಬ ಮಾಹಿತಿಯ ಮೇರೆಗೆ ಜಾಲತಾಣದ ಮೂಲಕ ಪ್ರಧಾನಿ ಕಚೇರಿಯ ವಿಳಾಸ ಪಡೆದುಕೊಂಡ ಅಶ್ವಲ್ ಶೆಟ್ಟಿ ವಿವರವಾದ ಪತ್ರವನ್ನು ಅಂಚೆ ಮೂಲಕ ಕಳುಹಿಸಿದ್ದ. ಮೂಲಭೂತ ಸೌಕರ್ಯಗಳಿಂದ ವಂಚಿತವಾದ ಕೋಡಿಬೈಲ್ ಹಳ್ಳಿಯ ರಸ್ತೆಯಲ್ಲಿ ಮಳೆಗಾಲದಲ್ಲಿ ನಡೆಯುವುದಕ್ಕೆ ಜನ ಕಷ್ಟಪಡಬೇಕು. ರಸ್ತೆಯನ್ನು ರಿಪೇರಿ ಮಾಡುವಂತೆ ಸ್ಥಳೀಯ ಜನಪ್ರತಿನಿಧಿಗಳಿಗೆ ಮಾಡಿದ ಮನವಿಗಳಿಗೆ ಲೆಕ್ಕವಿಲ್ಲ. ಈ ಹಿನ್ನೆಲೆಯಲ್ಲಿ ಕಳೆದ ತಿಂಗಳು ಅಶ್ವಲ್ ಪ್ರಧಾನಿಗೆ ಪತ್ರ ಬರೆದಿದ್ದ.
ಪತ್ರ ತಲುಪಿದ ತಕ್ಷಣ ಪ್ರಧಾನಿ ಕಚೇರಿಯಿಂದ ಕೇರಳ ಸರ್ಕಾರಕ್ಕೆ ಆದೇಶ ಬಂದೇ ಬಿಟ್ಟಿತು. ತಕ್ಷಣ ಎಚ್ಚೆತ್ತ ಕೇರಳ ವಿಧಾನಸಭಾ ಕಾರ್ಯಾಲಯ ರಸ್ತೆ ಡಾಂಬರೀಕರಣದ ಕಾಮಗಾರಿ ಕೈಗೊಳ್ಳುವಂತೆ ಮಂಗಲ್ಪಾಡಿ ಪಂಚಾಯತ್ಗೆ ಸೂಚಿಸಿದೆ. ಇದೀಗ ಕಾಮಗಾರಿಗೆ ಚಾಲನೆ ದೊರೆತಿದೆ.
ಅಶ್ವಲ್ ಕುಟುಂಬಕ್ಕೆ ಯಾವುದೇ ರಾಜಕೀಯ ಪಕ್ಷಗಳ ನಂಟಿಲ್ಲ. ಅವರ ತಂದೆ ಬಾಬು ಶೆಟ್ಟಿ ಹಣ್ಣಿನ ವ್ಯಾಪಾರಿ. ತಾಯಿ ಉದಯಶ್ರೀ ಗೃಹಿಣಿ. ಇದೀಗ ಪ್ರಧಾನಿ ಸ್ಪಂದನೆಯಿಂದ ಇಡೀ ಮಂಜೇಶ್ವರ ಗ್ರಾಮವೇ ಖುಷಿಪಟ್ಟಿದೆ. ಪ್ರಧಾನಿಗೆ ಬರೆದ ಪತ್ರ ಫಲ ನೀಡಿದೆ.