ದೊಡ್ಡ ಸುದ್ದಿ

ಪ್ರಭು ಬಿಟ್ಟ ರೈಲಿನಲ್ಲಿ ಹೊಸತಿನ ಮಾತೇ ಕಡಿಮೆ

ಅದರಂತೆ ರೈಲು ಸಚಿವ ಸುರೇಶ್ ಪ್ರಭು ಕೂಡ ಹಲವು ಜನಪರ ಯೋಜನೆಗಳನ್ನು ಪ್ರಕಟಿಸಿದ್ದು, 2016-2017ನೇ ಸಾಲಿನ ರೈಲ್ವೆ ಬಜೆಟ್‌‌ ಮಾಹಿತಿ ಈ ಕೆಳಗಿನಂತಿದೆ.

ಶೇ.92ರಷ್ಟು ಪ್ರಗತಿ ಸಾಧಿಸುವ ಗುರಿ:

ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ ಪ್ರಸಕ್ತ ಸಾಲಿನ ಬಜೆಟ್‌‌ನ್ನು ಸಿದ್ಧಪಡಿಸಲಾಗಿದ್ದು, ಹೊಸ ತೆರಿಗೆ ಮೂಲವನ್ನು ಪರಿಚಯಿಸುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಡಲಾಗುವುದು ಎಂದು ಪ್ರಭು ತಿಳಿಸಿದ್ದಾರೆ. ಅಲ್ಲದೇ ಪ್ರಸಕ್ತ ವರ್ಷದಲ್ಲಿ ಶೇ.92ರಷ್ಟು ಪ್ರಗತಿ ಸಾಧಿಸುವ ಗುರಿಯನ್ನು ಹೊಂದಲಾಗಿದೆ ಎಂದು ಸದನಕ್ಕೆ ಮಾಹಿತಿ ನೀಡಿದರು.

2020ರ ವೇಳೆಗೆ ಶೇ. 95ರಷ್ಟು ರೈಲುಗಳು ಸಮಯಕ್ಕೆ ಸರಿಯಾಗಿ ಓಡಲಿವೆ:

2020ರಲ್ಲಿ ಪ್ರಯಾಣಿಕರು ಬಯಸಿದಾಗ ಮುಂಗಡ ಟಿಕೆಟ್ ಸಿಗುವ ವ್ಯವಸ್ಥೆ ಮಾಡಲಾಗುವುದು ಎಂದು ಪ್ರಭು ಘೋಷಿಸಿದ್ದಾರೆ. ಅಲ್ಲದೇ ಶೇ. 95ರಷ್ಟು ರೈಲುಗಳು ಸಮಯಕ್ಕೆ ಸರಿಯಾಗಿ ಓಡುವ ಯೋಜನೆ ಜಾರಿಗೆ ತರಲಾಗುವುದು. ಇದೇ ವೇಳೆ ಈ ವರ್ಷ ಒಟ್ಟು 17 ಸಾವಿರ ಬಯೋ ವ್ಯಾಕ್ಯೂಮ್ ಟಾಯ್ಲೆಟ್‌ಗಳನ್ನು ಸ್ಥಾಪಿಸಲಾಗುವುದು ಎಂದು ಪ್ರಭು ಮಾಹಿತಿ ನೀಡಿದ್ದಾರೆ.

ರೈಲ್ವೆ ಆಧುನೀಕರಣ ಹಾಗೂ ಮೂಲ ಸೌಕರ್ಯಕ್ಕಾಗಿ 8.5 ಲಕ್ಷ ಕೋಟಿ:

2027ರೊಳಗಾಗಿ ಮಾನವ ರಹಿತ ರೈಲ್ವೆ ಕ್ರಾಸಿಂಗ್‌‌‌ಗನ್ನು ಬಂದ್ ಮಾಡಲಾಗವುದು ಎಂದು ತಿಳಿಸಿದ ಪ್ರಭು, ಒಟ್ಟು 1600 ಕಿ.ಮೀ ಮಾರ್ಗದ ವಿದ್ಯುದ್ದೀಕರಣ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಮುಂದಿನ 5 ವರ್ಷದಲ್ಲಿ ರೈಲ್ವೆ ಆಧುನೀಕರಣ ಹಾಗೂ ಮೂಲ ಸೌಕರ್ಯಕ್ಕಾಗಿ 8.5ಲಕ್ಷ ಕೋಟಿ ರೂಪಾಯಿ ಹೂಡಿಕೆ ಮಾಡಲಾಗುವುದು.

ರೈಲ್ವೆ ಅಭಿವೃದ್ಧಿಗೆ ಒಟ್ಟು 1.21 ಲಕ್ಷ ರೂಪಾಯಿ ಮೀಸಲು:

ಕಳೆದ ಬಜೆಟ್‌ನಲ್ಲಿ 8,720 ಕೋಟಿ ರೂಪಾಯಿ ಉಳಿಸಲಾಶಗಿದ್ದು, ಈ ಬಾರಿ ಹೆಚ್ಚುವರಿಯಾಗಿ 1.21 ಲಕ್ಷ ರೂಪಾಯಿಗಳನ್ನು ರೈಲ್ವೆ ಅಭಿವೃದ್ಧಿಗೆ ವ್ಯಯಿಸಲಾಗುವುದು ಎಂದು ಪ್ರಭು ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಹಿಂದಿನ ವರ್ಷಕ್ಕಿಂತ ಶೇ.10ರಷ್ಟು ಆದಾಯ ಉಳಿತಾಯದ ಗುರಿಯನ್ನು ಇಲಾಖೆ ಹೊಂದಿದೆ ಎಂದೂ ಪ್ರಭು ತಿಳಿಸಿದರು.

ಚೆನ್ನೈನಲ್ಲಿ ದೇಶದ ಮೊಟ್ಟ ಮೊದಲ ರೈಲ್ವೆ ಆಟೋ ಹಬ್:

ಚೆನ್ನೈನಲ್ಲಿ ದೇಶದ ಮೊಟ್ಟ ಮೊದಲ ರೈಲ್ವೆ ಆಟೋ ಹಬ್ ಸ್ಥಾಪಿಸುವುದರ ಮೂಲಕ ಲಕ್ಷಾಂತರ ಉದ್ಯೋಗ ಸೃಷ್ಟಿಗೆ ರೈಲ್ವೆ ಇಲಾಖೆ ಮುಂದಾಗಿದೆ. ಕೋಲ್ಕತ್ತಾದ ಮೆಟ್ರೋ ರೈಲು ಸೇವೆ 100 ಕಿ.ಮೀಗಳವರೆಗೆ ವಿಸ್ತೀರ್ಣ, ದೇಶದ 2000 ಸಾವಿರ ನಿಲ್ದಾಣಗಳಲ್ಲಿ 20 ಸಾವಿರ ಮಾಹಿತಿ ಪರದೆಗಳನ್ನು ಅಳವಡಿಸಲಾಗುವುದು ಎಂದು ಸುರೇಶ್ ಪ್ರಭು ತಿಳಿಸಿದ್ದಾರೆ.

ಪತ್ರಕರ್ತರಿಗೆ ವಿಶೇಷ ಇ-ಬುಕ್ಕಿಂಗ್ ವ್ಯವಸ್ಥೆ:

ಪತ್ರಕರ್ತರಿಗೆ ಇ-ಬುಕ್ಕಿಂಗ್ ವ್ಯವಸ್ಥೆ, ಹಾಗೂ ಹಮ್‌ ಸಫರ್, ತೇಜಸ್ ಹಾಗೂ ಉದಯ್ ರೈಲುಗಳ ಪ್ರಸ್ತಾವನೆ, ವಾರಣಾಸಿಯಿಂದ ದೆಹಲಿಗೆ ಹೊಸ ರೈಲು ಘೋಷಣೆಯನ್ನು ರೈಲ್ವೆ ಸಚಿವ ಸುರೇಶ್ ಪ್ರಭು ಘೋಷಿಸಿದ್ದಾರೆ.

ರೈಲ್ವೆ ವಿಶ್ವವಿದ್ಯಾಲಯದ ನಿರ್ಮಾಣಕ್ಕಾಗಿ ಅಕಾಡಮಿ:

ಗುಜರಾತ್‌‌‌ನ ವಡೋದರಾದಲ್ಲಿ ರೈಲ್ವೆ ವಿಶ್ವವಿದ್ಯಾನಿಲಯದ ನಿರ್ಮಾಣಕ್ಕಾಗಿ ಅಕಾಡಮಿ ಆಯ್ಕೆ, ಪ್ರಾದೇಶಿಕ ಭಾಷೆಗಳಲ್ಲಿ ‘ರೈಲು ಬಂಧು’ ಮ್ಯಾಗಜೀನ್‌‌‌ ಹಾಗೂ ನಿಲ್ದಾಣಗಳ ಮಳಿಗೆಗಳಲ್ಲಿ ಹಾಲು ಮತ್ತು ಔಷಧಿಗಳ ವ್ಯವಸ್ಥೆ, ರೈಲಿನಲ್ಲಿ ಸಿಗುವ ಆಹಾರದ ಗುಣಮಟ್ಟ ಹೆಚ್ಚಿಸಲು ಅಗತ್ಯ ಕ್ರಮಗಳನ್ನು ಸುರೇಶ್ ಪ್ರಭು ಘೋಷಿಸಿದ್ದಾರೆ.

ತಾಯಂದರಿಗಾಗಿ ಜನನಿ ಸೇವಾ ಯೋಜನೆ:

ಪ್ರತಿ ರೈಲಿನಲ್ಲಿ ಹಿರಿಯ ನಾಗರಿಕರಿಗಾಗಿ 120 ಲೋವರ್ ಬರ್ತ್‌‌ಗಳ ಕಾಯ್ದಿರಿಸುವಿಕೆ, ತಾಯಂದರಿಗಾಗಿ ಜನನಿ ಸೇವಾ ವ್ಯವಸ್ಥೆ, ಮಕ್ಕಳಿಗಾಗಿ ಬಿಸಿ ನೀರು, ಊಟದ ವ್ಯವಸ್ಥೆ ಹಾಗೂ ಪ್ರತಿ ವಿಭಾಗದಲ್ಲೂ ಮಹಿಳೆಯರಿಗಾಗಿ ಶೇ. 30 ರಷ್ಟು ಮೀಸಲಾತಿ, ಅಂಗವಿಕಲ ಪ್ರಯಾಣಿಕರಿಗಾಗಿ ಸಾರಥಿ ಸೇವಾ ವದಯವಸ್ಥೆ ಪ್ರಕಟಣೆ ಈ ಬಾರಿಯ ರೈಲ್ವೆ ಬಜೆಟ್ ವಿಶೇಷತೆಗಳಲ್ಲಿ ಒಂದು.

ಸಂಚಾರ ನಿಯಂತ್ರಣಕ್ಕೆ ಡ್ರೋನ್ ಹಾಗೂ ಜಿಪಿಎಸ್ ಬಳಕೆ:

ವಾಣಿಜ್ಯ ಮಾರ್ಗಶಗಳಲ್ಲಿ ಡಬ್ಬಲ್ ಡೆಕ್ಕರ್ ರೈಲು ಸೇವೆ, ರೈಲು ಸಂಚಾರ ನಿಯಂತ್ರಣಕ್ಕೆ ಡ್ರೋನ್ ಹಾಗೂ ಜಿಪಿಎಸ್ ವ್ಯವಸ್ಥೆ ಅಳವಡಿಕೆ ಮುಂತಾದ ಆಧುನಿಕ ಸೌಲಭ್ಯಗಳನ್ನು ಈ ಬಾರಿಯ ರೈಲ್ವೆ ಬಜೆಟ್‌‌ನಲ್ಲಿ ಘೋಷಿಸಲಾಗಿದೆ. ದಿವ್ಯಾಂಗರಿಗಾಗಿ ಪ್ರತ್ಯೇಕ ಶೌಚಾಲಯ ವ್ಯವಸ್ಥೆ, ಮಹಿಳಾ ಪ್ರಯಾಣಿಕರ ಸುರಕ್ಷತೆಗಾಗಿ 24/7 ಸಹಾಯವಾಣಿ ಸೌಲಭ್ಯ, ರೈಲು ಬೋಗಿಗಳ ಸ್ವಚ್ಛತೆಗಾಗಿ ‘ಕ್ಲೀನ್ ಮೈ ಕೋಚ್’ ಎಸ್ಎಂಎಸ್ ಯೋಜನೆ ಜಾರಿಗೊಳಿಸಲಾಗಿದೆ.

ಎಲ್ಲಾ ನಿಲ್ದಾಣಗಳಲ್ಲಿ ಸಿಸಿಟಿವಿ ಅಳವಡಿಕೆಯ ಘೊಷಣೆ:

ಪ್ರಯಾಣಿಕರ ಸುರಕ್ಷತೆಗಾಗಿ 182 ಹೆಲ್ಪ್‌‌‌‌‌ಲೈನ್ ಸ್ಥಾಪನೆ, 65 ಸಾವಿರ ಹೆಚ್ಚುವರಿ ಉದ್ಯೋಗ ಸೃಷ್ಟಿಗೆ ಕ್ರಮ, ದೇಶದ ಎಲ್ಲಾ ನಿಲ್ದಾಣಗಳಲ್ಲಿ ವೈಫೈ ಸೌಲಭ್ಯ, ಎಲ್ಲ ನಿಲ್ದಾಣಗಳಲ್ಲಿಯೂ ಸಿಸಿಟಿವಿ ಅಳವಡಿಕೆಯ ಘೊಷಣೆ, ಜನರಲ್ ಬೋಗಿಗಳಲ್ಲಿ ದುಡ್ಡು ನೀಡಿ ಟಿಕೆಟ್ ಪಡೆಯುವ ಸೌಲಭ್ಯ ಇವು ಈ ಬಾರಿಯ ರೈಲು ಬಜೆಟ್‌ನ ವಿಶೆಷತೆಗಳು.

ಧಾರ್ಮಿಕ ಕ್ಷೇತ್ರಗಳ ರೈಲ್ವೆ ನಿಲ್ದಾಣಗಳ ಆಧುನಿಕರಣ:

ಎಲ್ಲಾ ಧಾರ್ಮಿಕ ಕ್ಷೇತ್ರಗಳ ರೈಲ್ವೆ ನಿಲ್ದಾಣಗಳ ಆಧುನಿಕರಣ, ಸಾಮಾನ್ಯ ಬೋಗಿಗಳಲ್ಲೂ ಮೊಬೈಲ್ ಚಾರ್ಜಿಂಗ್ ವ್ಯವಸ್ಥೆ, ಕುಡಿಯುವ ನೀರಿನ ಸೌಲಭ್ಯ, ಸಾಮಾನ್ಯ ಪ್ರಯಾಣಿಕರಿಗೆ ಅಂತ್ಯೋದಯ ರೈಲು ಸೇವೆಗಳನ್ನು ಪ್ರಭು ಘೋಷಿಸಿದ್ದಾರೆ. ಇದೇ ವೇಳೆ 139 ದೂರವಾಣಿ ಕರೆ ಮೂಲಕ ರದ್ದುಗೊಳಿಸುವ ಯೋಜನೆ ಕೂಡ ಪ್ರಕಟಗೊಂಡಿದೆ.

ಎಂಬಿಎ ಹಾಗೂ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಇಂಟರ್ನಶಿಪ್:

ಕೇವಲ ಪ್ರಯಾಣಿಕ ರೈಲುಗಳಿಗಷ್ಟೇ ಅಲ್ಲದೇ ಗೂಡ್ಸ್‌ ರೈಲುಗಳಿಗೂ ಸರಿಯಾದ ವೇಳಾಪಟ್ಟಿ ನಿಗದಿಗೊಳಿಸಲಾಗುವುದು ಎಂದು ಹೇಳಿರುವ ಪ್ರಭು, ಎಂಬಿಎ ಹಾಗೂ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಇಂಟರ್ನಶಿಪ್ ವ್ಯವಸ್ಥೆಯ ಘೊಷಣೆ ಮಾಡಿದ್ದಾರೆ.

ಪ್ರಸಕ್ತ ಸಾಲಿನ ಬಜೆಟ್ ದೇಶದ ಪ್ರತಿಯೊಬ್ಬ ನಾಗರಿಕನ ಬಜೆಟ್ ಎಂದು ತಮ್ಮ ಬಜೆಟ್ ಭಾಷಣದಲ್ಲಿ ಸುರೇಶ್ ಪ್ರಭು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೇ ಜನಪ್ರಿಯ ಬಜೆಟ್ ಸಿದ್ಧಪಡಿಸಲು ನೆರವಾದ ಎಲ್ಲರಿಗೂ ಧನ್ಯವಾದ ಸಲ್ಲಿಸುವುದಾಗಿ ಪ್ರಭು ಸದನಕ್ಕೆ ತಿಳಿಸಿದರು.