ಕ್ರೀಡಾ ಸುದ್ದಿ

ಮಿ.ರಾಮಾಚಾರಿ ‘ಪ್ರೊ ಕಬಡ್ಡಿ’ಗೆ ಪ್ರಚಾರ ರಾಯಭಾರಿ

ಬೆಂಗಳೂರು: ಸ್ಯಾಂಡಲ್‌ವುಡ್‌ ರಾಕಿಂಗ್‌ ಸ್ಟಾರ್‌ ಯಶ್ ಸಹ ಮೂರನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ಗೆ ಪ್ರಚಾರ ರಾಯಭಾರಿಯಾಗಿ ಕೈ ಜೋಡಿಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ನಟ ಯಶ್, ‘ಸ್ಟಾರ್ ಸ್ಪೋರ್ಟ್ಸ್ ಪ್ರೊ ಕಬಡ್ಡಿಯೊಂದಿಗೆ ಕೈಜೋಡಿಸಿರುವುದು ಸಂತಸವಾಗಿದೆ. ಸ್ಟಾರ್ ಇಂಡಿಯಾ, ಕಬಡ್ಡಿ ಕ್ರೀಡೆಯನ್ನು ಜನಪ್ರಿಯಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಟೂರ್ನಿಯ ತಂಡಗಳಲ್ಲಿರುವ ಆಟಗಾರರನ್ನು ಭೇಟಿಯಾಗಲು ಕಾತುರದಿಂದ ಕಾದಿದ್ದೇನೆ. ದೈಹಿಕ ಮತ್ತು ಮಾನಸಿಕವಾಗಿ ಈ ಆಟಗಾರರು ತೋರುತ್ತಿರುವ ಗಟ್ಟಿತನ ಮತ್ತು ಛಲವನ್ನು ಕಂಡು ಬೆರಗಾಗಿದ್ದೇನೆ. ಅವರದು ಅದ್ಭುತ ಸಾಮರ್ಥ್ಯ. ಅವರೆಲ್ಲರ ಆಟವನ್ನು ಅತ್ಯಂತ ಸನಿಹದಿಂದ ನೋಡಲು ಸಿದ್ಧವಾಗಿದ್ದೇನೆ ಎಂದು ಹೇಳಿದರು.

ಇದೇ ವೇಳೆ ಮಾತನಾಡಿದ ಸ್ಟಾರ್ ಇಂಡಿಯಾ ಸಿಒಒ ಸಂಜಯ್ ಗುಪ್ತಾ, ಕಳೆದ ಎರಡೂ ಆವೃತ್ತಿಗಳಿಗೆ ಟಿ.ವಿ. ಪ್ರೇಕ್ಷಕರಿಂದ ಅಪಾರ ಮೆಚ್ಚುಗೆಯ ಮಹಾಪೂರ ಹರಿದುಬಂದಿದೆ. ನಾವು ನಿರೀಕ್ಷೆ ಮಾಡಿದ್ದಕ್ಕಿಂತಲೂ ಹೆಚ್ಚಿನ ಸ್ಪಂದನೆ ದೊರೆಯಿತು. ಕ್ರೀಡಾಂಗಣವೂಜನರಿಂದ ತುಂಬಿ, ಕ್ರೀಡಾಸಕ್ತರ ಪ್ರೋತ್ಸಾಹ ಉಕ್ಕಿ ಹರಿದಿತ್ತು. ಕ್ರಿಕೆಟ್ ನಂತರ ಅತಿ ಹೆಚ್ಚು ಜನಪ್ರಿಯ ಆಟವಾಗಿ ಮತ್ತು ಅತಿ ಹೆಚ್ಚು ವೀಕ್ಷಕರು ನೋಡುವ ಕ್ರೀಡೆಯಾಗಿ ಪ್ರೊ ಕಬಡ್ಡಿ ಇರುವುದು ಹೆಮ್ಮೆಯ ವಿಷಯವೆಂದು ನುಡಿದರು.

ಪ್ರತಿಬಾರಿ ಜನರಿಂದ ಹೆಚ್ಚುತ್ತಿರುವ ಪ್ರೀತಿ ಮತ್ತು ಬೇಡಿಕೆಯು ನಾವು ಮತ್ತಷ್ಟು ಸಾಧನೆ ಮಾಡಲು ಸ್ಪೂರ್ತಿಯಾಗಿದೆ. ಈ ಮೂಲಕ ಹೊಸ ಪ್ರತಿಭೆಗಳು, ಆಟಗಾರರನ್ನು ಪ್ರೋತ್ಸಾಹಿಸಲು ಸಾಧ್ಯವಾಗುತ್ತಿದೆ. ದೇಶದಲ್ಲಿ ಬಹುಕ್ರೀಡಾ ಪರಂಪರೆ ಹುಟ್ಟುಹಾಕಿದ್ದೇವೆ. ಆ ಮೂಲಕ ಕ್ರೀಡೆಯೂ ಬೆಳೆಯುತ್ತಿದೆ ಎಂದರು.

ಸ್ಟಾರ್ ಸ್ಪೋರ್ಟ್ಸ್ ಇಂಡಿಯಾದ ದಕ್ಷಿಣ ವಿಭಾಗದ ಅಧ್ಯಕ್ಷ ಕೆ. ಮಾಧವನ್ ಮಾತನಾಡಿ, ಸ್ಟಾರ್ ಸ್ಪೋರ್ಟ್ಸ್ ಕಬಡ್ಡಿ ನಮ್ಮ ಪ್ರಾದೇಶಿಕ ಮಾರುಕಟ್ಟೆಗಳಲ್ಲಿ ಜನಪ್ರಿಯವಾಗಿದೆ. ನಮ್ಮ ಪ್ರಯತ್ನವನ್ನು ಜನರು ತೆರೆದ ಮನಸ್ಸಿನಿಂದ ಸ್ವೀಕಾರ ಮಾಡಿದ್ದಾರೆ. ಅಸಂಖ್ಯಾತ ಕಬಡ್ಡಿ ಅಭಿಮಾನಿಗಳು ಮತ್ತು ಸ್ಥಳೀಯ ಹೀರೋಗಳಾದ ಆಟಗಾರರಿಗೆ ಸಾಕಷ್ಟು ಪ್ರೋತ್ಸಾಹ ಸಿಗುತ್ತಿದೆ. ಕನ್ನಡದ ತಾರೆ ಯಶ್ ಪ್ರಚಾರ ರಾಯಭಾರಿಯಾಗಿರುವುದು ಸಂತಸದ ವಿಷಯ. ಮೂರನೇ ಆವೃತ್ತಿಯ ಲೀಗ್ ಕೂಡ ಅತಿ ದೊಡ್ಡ ಯಶೋಗಾಥೆ ಆಗುವುದು ಖಚಿತವೆಂದರು.