ಕೋಚಿಂಗ್ ಪಡೆಯಲು ಹಣವಿಲ್ಲದ ಹೀನ ಸ್ಥಿತಿ. ತಂದೆ ಜೈಪುರದ ವೈರ್ ಫ್ಯಾಕ್ಟರಿಯಲ್ಲಿ ಕಾರ್ಮಿಕನಾಗಿ ಕೆಲಸ. ಮಗನನ್ನು ಜೈಪುರ್ ಪ್ರೀಮಿಯರ್ ಕ್ರಿಕೆಟ್ ಅಕಾಡೆಮಿಗೆ ಸೇರಿಸಲು ೧೦ ಸಾವಿರ ರೂ.ಗಳ ಸಾಲ ಸಹ ಮಾಡಿದ್ದ. ಆದ್ರೆ, ಇಂದು ಆ ಹುಡುಗ ಕ್ರಿಕೆಟ್ ಜಗತ್ತಿಗೆ ಅಚ್ಚರಿ ಮೂಡಿಸಿದ್ದಾನೆ.
ಫ್ಯಾಕ್ಟರಿಯಲ್ಲಿ ಕಾರ್ಮಿಕನಾಗಿ ದುಡಿಯುತ್ತಿರುವ ಭರತ್ ಸಿಂಗ್ ಎಂಬುವರ ಪುತ್ರ ನಾಥು ಸಿಂಗ್ ವೇಗಿ ಬೌಲರ್ ಆಗಿ ರೂಪುಗೊಂಡಿದ್ದು, ಇಂದು ಭಾರತಿಯರೆಲ್ಲ ಬಾಯಿ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿದ್ದಾನೆ. ಯಾಕಂದ್ರೆ ಪ್ರಸಕ್ತ ಸಾಲಿನ ಐಪಿಎಲ್ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ಈತನನ್ನು 3.20 ಕೋಟಿ ರೂ.ಗೆ ಖರೀದಿಸಿದೆ.
ಮೊನ್ನೆಯವರಿಗೂ ಬಡವ.. ಈಗ ಕರೋಡಪತಿ..!
ಹೌದು.., ಮೊನ್ನೆಯವರೆಗೂ ಬಡವನಾಗಿ ಜೀವನ ಸಾಗಿಸುತ್ತಿದ್ದ ನಾಥುಸಿಂಗ್ ಸದ್ಯ ಮಿಲೇನಿಯರ್.. ಕಳೆದ ಎರಡು ದಿನಗಳ ಹಿಂದೆ ಬೆಂಗಳೂರಿನಲ್ಲಿ ನಡೆದ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ನಾಥು ಸಿಂಗ್ನನ್ನು ಮುಂಬೈ ಇಂಡಿಯನ್ಸ್ ತಂಡ ಬರೊಬ್ಬರಿ 3.20ಕೋಟಿ ರೂ.ಗೆ ಬಿಡ್ಡ್ ಮಾಡಿದೆ.
ಜೋಪಡಿಯಿಂದ ಐಪಿಎಲ್ಗೆ
ನಾಲ್ಕು ವರ್ಷಗಳ ಹಿಂದೆ ಅಕಾಡೆಮಿಗೆ ಸೇರಿದ ಬಳಿಕ ನಾಥು ಸಿಂಗ್ ಅದೃಷ್ಟ ಖುಲಾಯಿಸಿತು. 2013ರಲ್ಲಿ ರಾಜಸ್ಥಾನದ ಅಂಡರ್-19 ತಂಡಕ್ಕೆ ಆಯ್ಕೆಯಾದ ನಾಥು ಸಿಂಗ್ ಅಲ್ಲಿಂದ ತಿರುಗಿ ನೋಡಿಲ್ಲ. ಈ ಬಾರಿ ರಣಜಿ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ ನಾಥು ಸಿಂಗ್ ದಿಲ್ಲಿ ವಿರುದ್ಧದ ಪಂದ್ಯವೊಂದರಲ್ಲಿ 87 ರನ್ನಿಗೆ 7 ವಿಕೆಟ್ ಪಡೆದಿದ್ದು, ಎಲ್ಲರ ಗಮನ ಸೆಳೆದಿತ್ತು. ಈತನ ಪ್ರತಿಭೆಯನ್ನು ಗೌತಮ್ ಗಂಭೀರ್ ಗುರುತಿಸಿದರು. ನಾಥು ಸಿಂಗ್ರ ಪ್ರತಿಭೆಯನ್ನು ಜಾಹೀರುಗೊಳಿಸುವ ಮೂಲಕ ಅವರಿಗೆ ನೆರವಾದರು.
ಬಹುವರ್ಷಗಳ ಬಳಿಕ ಹೊಸ ಪ್ರತಿಭೆಯೊಂದು ಭಾರತದ ಕದ ತಟ್ಟುತ್ತಿದೆ. ನಾಥು ಸಿಂಗ್’ಗೆ ಶೋಯಬ್ ಅಖ್ತರ್ ಬೌಲಿಂಗ್ ಅಂದ್ರೆ ತುಂಬಾ ಇಷ್ಟ. ಶೋಯಬ್ ತುಂಬಾ ವೇಗವಾಗಿ ಬೌಲ್ ಮಾಡುತ್ತಾರೆ. ಆತನಂತೆ ನಾನೂ ವೇಗವಾಗಿ ಬೌಲ್ ಮಾಡಿ ಅವರ ದಾಖಲೆಯನ್ನೇ ಮುರಿಬೇಕು ಎಂದು ಹೇಳುತ್ತಾನೆ ಈ ಹೈದ.