ಹೌದು, ನಾವಿಲ್ಲಿ ಹೇಳುತ್ತಿರುವುದು ವೈದ್ಯಕೀಯ ವಿದ್ಯಾರ್ಥಿನಿ ಶ್ರುತಿ ಗಂಡನ ಬಡತನದ ಸ್ಟೋರಿ. ಬೆಂಗಳೂರಿನಲ್ಲಿ ವೈದ್ಯಕೀಯ ವ್ಯಾಸಂಗ ಮಾಡುವ ಮೂಲಕ ಆದರ್ಶಪ್ರಾಯಳಾಗಿರುವ ಶ್ರುತಿಯನ್ನು ಪ್ರೋತ್ಸಾಹಿಸುತ್ತಾ, ಆಕೆಯ್ನನೇ ವರಿಸಿದ್ದ ಗಂಡನಿಗೆ ಇದೀಗ ಹಣಕಾಸಿನ ಸಮಸ್ಯೆ ಎದುರಾಗಿದೆ. ಹೀಗಾಗಿ ಶ್ರುತಿಯ ಪರೀಕ್ಷಾ ಶುಲ್ಕ ಭರಿಸಲಾಗದೇ ಆಕೆಯ ಪತಿ ಜಗದೀಶ್ (27) ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಶ್ರುತಿ ಹಾಕಿದ ಹೆಜ್ಜೆ
ಕಾಸರಗೋಡು ಜಿಲ್ಲೆ ವಾಣಿನಗರದ ಗುಡಿಸಲೊಂದರಲ್ಲಿ ವಾಸಿಸುತ್ತಿದ್ದ ಶ್ರುತಿ ಬಾಲ್ಯದಲ್ಲೇ ಎಂಡೋಸಲ್ಫಾನ್ ಪೀಡಿತೆಯಾಗಿ ಬಲಭಾಗದಲ್ಲಿ ಚಲನಶಕ್ತಿಯನ್ನು ಕಳೆದುಕೊಂಡವಳು. ಚಿಕ್ಕಕಾಲು, ಎಡಭಾಗದಲ್ಲಿ ಮಡಚಿನಿಂತ ಎರಡು ಬೆರಳುಗಳಿಂದ ತನ್ನ ದೈನಂದಿನ ಕೆಲಸಗಳಿಗೂ ಕಷ್ಟಪಡುವಂತಾಗಿದ್ದರೂ ಅತ್ಯಧಿಕ ಅಂಕದೊಂದಿಗೆ ಪಿಯುಸಿ ಪಾಸಾಗಿದ್ದಳು.
ಈಕೆಯ ತಾಯಿ ಬಾಲ್ಯದಲ್ಲೇ ಕ್ಯಾನ್ಸರ್ ಪೀಡಿತರಾಗಿ ಸಾವನ್ನಪ್ಪಿದ್ದರು. ತಂದೆ ತಾರನಾಥ ರಾವ್ ಮತ್ತು ಮಲತಾಯಿ ರೇವತಿ, ಎಂಡೋ ಸಂತ್ರಸ್ತರ ಪರ ಹೋರಾಟಗಾರ ಮೋಹನ್ ಕುಮಾರ್ ಸಹಕಾರದಿಂದ ಸಿಇಟಿ ಮೂಲಕ ಬೆಂಗಳೂರಿನ ಕಾಲೇಜೊಂದರಲ್ಲಿ ಕರ್ನಾಟಕ ಸರ್ಕಾರ ಬಿಹೆಚ್ಎಂಎಸ್ ಸೀಟು ನೀಡಿತ್ತು. ಅಂಗವೈಕಲ್ಯವಿದ್ದರೂ ಅದೇ ಗ್ರಾಮದ ಜಗದೀಶ್ ಪ್ರೀತಿಯಿಂದಲೇ ಈಕೆಯನ್ನು ಮದುವೆಯಾಗಿದ್ದರು.